ಶಿರಾಳಕೊಪ್ಪ:20/2/2026
ಹತ್ತಿರದ ತೊಗರ್ಸಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕ ಸ್ಥಾಪಿಸುವ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸುಮಾರು 30ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಗ್ರಾಮ ಪಂಚಾಯಿತಿ ಆಡಳಿತ ಅಕ್ರಮವಾಗಿ ಕಡಿತಲ ಮಾಡಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಕೌಲಿ ಹರೀಶ್ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತೊಗರ್ಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 75 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ಮಂಜೂರು ಆಗಿದ್ದು ಕಸ ವಿಲೇವಾರಿ ಘಟಕಕ್ಕೆ ಸ್ಥಳ ನಿಗದಿ ಮಾಡುವ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಳು ಯಾವುದೇ ಸಭೆ ಕರೆಯದೆ ಚರ್ಚೆ ನಡೆಸದೆ ಪಂಚಾಯತಿ ವತಿಯಿಂದ ನಡೆಯುವ ಸಾಮಾನ್ಯ ಸಭೆಗಳಲ್ಲಿಯೂ ಸಹ ವಿಷಯ ಪ್ರಸ್ತಾಪ ಮಾಡದೆ ಕೆಲಸ ನಡೆಸುತ್ತಿದ್ದು ಈ ಬಗ್ಗೆ ತನಿಖೆ ನಡೆಸುವ ಅವಶ್ಯಕತೆ ಇದೆ.

ಪ್ರಸ್ತುತ ಕಸ ವಿಲೇವಾರಿ ಘಟಕದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸುಮಾರು 30ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕಡೆತಲೆ ಮಾಡಲಾಗಿದೆ. ಈಗಾಗಲೇ ಮರಗಳ ಕಡಿತಲೆ ಬಗ್ಗೆ ಶಿರಾಳಕೊಪ್ಪದ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು ಅವರು ಸಹ ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗ್ಯಾರೆಂಟಿ ಸಮಿತಿ ಸದಸ್ಯ ಪರಶುರಾಮ, ಕಾಂಗ್ರೆಸ್ ಮುಖಂಡರಾದ ಗಣೇಶಪ್ಪ ಕೌಲಿ, ಪಾಲಕ್ಷಪ್ಪ ಕೌಲಿ, ದ್ಯಾಮರೆಡ್ಡಿ, ರುದ್ರಪ್ಪ, ಹಾಗೂ ವೆಂಕಟೇಶ್ ಭಾಗವಹಿಸಿದ್ದರು.

