ಶಿರಾಳಕೊಪ್ಪ:23/3/2026
ಕಳೆದ ಎರಡು ಮೂರು ದಿನಗಳಿಂದ ಹತ್ತಿರದ ತಡಸನಹಳ್ಳಿ, ಅಡಗಂಟಿ ಮುತ್ತಗಿ ಹಾಗೂ ಬಿದರಿಕೊಪ್ಪ ಗ್ರಾಮಗಳ ಹೊರವಲಯದಲ್ಲಿ, ಗದ್ದೆ ತೋಟ ಗಳ ವ್ಯಾಪ್ತಿಯಲ್ಲಿ ರೈತರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ ಕ್ರೂರ ಮೃಗ ಸೋಮವಾರ ಹೆಣವಾಗಿ ಪತ್ತೆ ಯಾಗಿದೆ.

ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆ ತಡಸನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 74-75 ರಲ್ಲಿರುವ ಅಡಿಕೆ ತೋಟದಲ್ಲಿ ಸೋಮವಾರ ಹೆಣವಾಗಿ ಪತ್ತೆಯಾಗಿದೆ. ಶುಕ್ರವಾರ ಸಂಜೆ ಸುದೀಪ್ ಎಂಬುವವರ ಮೇಲೆ ದಾಳಿ ಮಾಡಿದ ಚಿರತೆ ಅದೇ ತೋಟದಲ್ಲಿ ಹೆಣವಾಗಿ ಬಿದ್ದಿದ್ದನ್ನು ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ ಹಾಗೂ ಕಳೆದ ಎರಡು ಮೂರು ದಿನಗಳಿಂದ ಈ ಭಾಗ ದಲ್ಲಿ ಆತಂಕ ಸೃಷ್ಟಿಸಿದ್ದ ಮೃಗ ಇದೇ ಚಿರತೆ ಎಂದು ಖಾತರಿ ಪಡಿಸಿದ್ದಾರೆ.
ಚಿರತೆ ಸಾವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೊಪ್ಯಾ ನಾಯಕ್ ಚಿರತೆ ಬೇಟೆ ಇಲ್ಲದೇ ಹಸಿವಿನಿಂದ ಮೃತ ಪಟ್ಟಿರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದು ಮರಣೋತ್ತರ ಪರೀಕ್ಷೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಪರೀಕ್ಷೆಯ ವರದಿ ಬಂದ ನಂತರದಲ್ಲಿ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದರು.
ಪಶು ವೈದ್ಯಾಧಿಕಾರಿ ಡಾll ಅನಂತ್ ನಾಯಕ್ ಚಿರತೆಯ ಶವ ಪರೀಕ್ಷೆ ನಡೆಸಿದರು.
ವಲಯ ಅರಣ್ಯಾಧಿಕಾರಿ ಜಾವೀದ್ ಅಂಗಡಿ, ಶಿಕಾರಿಪುರ ಉಪ ವಲಯದ ಅರಣ್ಯಾಧಿಕಾರಿಗಳಾದ ಕಿರಣ್, ರಾಘವನ್, ಅರಣ್ಯ ರಕ್ಷಕರಾದ ಸಂತೋಷ್, ಸುನಿಲ್, ಸೇರಿದಂತೆ ನಿಸರ್ಗ ಕನ್ಸೆರ್ವೇಷನ್ ಟ್ರಸ್ಟ್ ನ ಅರುಣ್ ಕುಮಾರ್ ಜಿ ಎನ್ ಹಾಗೂ ಸುಣ್ಣದಕೊಪ್ಪ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇದ್ದರು.
ವರದಿ:ನವೀದ್ ಶಿರಾಳಕೊಪ್ಪ

