ಶಿರಾಳಕೊಪ್ಪ:06/03/2026
ಪುರಸಭೆಯಲ್ಲಿ ಪ್ರಸ್ತುತ ಚುನಾಯಿತ ಸದಸ್ಯರಿಲ್ಲದೆ, ಅಧಿಕಾರಿಗಳ ಆಡಳಿತ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಜೆಟ್ 2026-27 ನೇ ಸಾಲಿನ ಪೂರ್ವಭಾವಿ ಸಭೆಯು ಶುಕ್ರವಾರ ಪುರಸಭೆಯ ಬಿ ಎಸ್ ಯಡಿಯೂರಪ್ಪ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಪರಶುರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಬಾರಿಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ ಊರಿನ ಮಹಿಳೆಯರ ಉಪಸ್ಥಿತಿ ಗಮನ ಸೆಳೆಯಿತು.
ಮುಂಬರುವ ವರ್ಷದ ಬಜೆಟ್ ನಲ್ಲಿ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯ ಸುಧಾರಣೆಗೆ ವಿಶೇಷ ಒತ್ತು ಕೊಡಲು ಅಧಿಕಾರಿಗಳಿಗೆ ಸಲಹೆ ನೀಡಿದ ಮಹಿಳೆಯರು ಪಟ್ಟಣದಲ್ಲಿ ಚಿರಂಡಿ ಮತ್ತು ಕನ್ಸೆರ್ವೆನ್ಸಿ ಗಳಲ್ಲಿ ಕೊಳತು ನಾರುತ್ತಿರುವ ಬಗ್ಗೆ ದೊರು ನೀಡಿದರು.

ಮಾಜಿ ನಾಮನಿರ್ದೇಶಿತ ಸದಸ್ಯ ಮಂಚಿ ಶಿವಾನಂದ್ ಕೆಲ ಅಧಿಕಾರಿಗಳ ವಿಳಂಬ ಧೋರಣೆ ಮತ್ತು ಸಾರ್ವಜನಿಕರ ಅಲೆದಾಟದ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಿದರು.
ಪಟ್ಟಣದ ಸಾರ್ವಜನಿಕ ಸ್ವತ್ತುಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದ ಯುವ ಮುಖಂಡ ಸದ್ದು ಬೆಳ್ಳಿಗಾವಿ, ರಾಜಾರೋಷವಾಗಿ ನಡೆಯುತ್ತಿರುವ ಒತ್ತುವರಿಗಳ ವಿರುದ್ಧ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಹಿಳೆಯರ ಕಲ್ಯಾಣ ಮತ್ತು ಆರ್ಥಿಕ ಸುಭದ್ರತೆಯ ಬಗ್ಗೆ ಪ್ರಸ್ತಾಪಿಸಿದ ಸಮುದಾಯ ಸಂಪನ್ಮೂಲ ಅಧಿಕಾರಿ ಬಾಲಾಜಿ ರಾವ್ ಮಹಿಳೆಯರ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಗಾಗಿ ವಿವಿಧ ವಿಮಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಊರಿನ ಮುಖಂಡರ ಹಾಗೂ ಮಹಿಳೆಯರ ಎಲ್ಲಾ ಅನಿಸಿಕೆ, ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸಿದ ಪುರಸಭೆಯ ಮುಖ್ಯಾಧಿಕಾರಿಗಳು ಸ್ವಚ್ಛತೆ, ಒತ್ತುವರಿ ತಡೆ,ಹಾಗೂ ಆಡಳಿತಾತ್ಮಕ ಸುಧಾರಣೆಗೆ ಸಂಬಂಧಿಸಿದ ಸಲಹೆಗಳನ್ನು ಮುಂಬರುವ ಬಜೆಟ್ನಲ್ಲಿ ಆದ್ಯತೆಯ ಮೇಲೆ ಪರಿಗಣಿಸಲಾಗುವುದೆಂದು ಭರವಸೆ ನೀಡಿದರು.
ಮಾಜಿ ಅಧ್ಯಕ್ಷೆ ಮಮತಾ ನಿಂಗಪ್ಪ, ಮುಖಂಡರಾದ ಎಚ್ ಎಂ ಚಂದ್ರಶೇಖರ, ರೂಪಾ ಹಾಲೇಶ್, ನಿರ್ಮಲ ಪ್ರಕಾಶ್, ಗಣೇಶ್ ಭಂಡಾರಿ, ನಿಂಗಪ್ಪ, ಜಬಿ,ಪುರಸಭೆ ವ್ಯವಸ್ಥಾಪಕ ನಿರಂಜನ್, ಕಿರಿಯ ಅಭಿಯಂತರ ಶೇಖರ್ ನಾಯಕ್ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಕಾಶ್ ಹಾಗೂ ವಿವಿಧ ಮಹಿಳಾ ಸಂಘಗಳ ಸದಸ್ಯರು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ

