ಶಿರಾಳಕೊಪ್ಪ:21/3/2026
ಪ್ರತ್ಯೇಕವಾಗಿ ಮೂವರ ಮೇಲೆ ಚಿರತೆ ದಾಳಿ: ಅಪಾಯದಿಂದ ಪಾರು
ಹತ್ತಿರದ ತಡಸನಹಳ್ಳಿ, ಮುತ್ತಗಿ ಹಾಗೂ ಅಡಗಂಟಿ ಗ್ರಾಮದ ಸುತ್ತಮುತ್ತ ಚಿರತೆ ಮೂರು ಜನ ರೈತರ ಮೇಲೆ ದಾಳಿಗೆ ಪ್ರಯತ್ನಿಸಿದ ಘಟನೆ ಶನಿವಾರ ನಡೆದು ರೈತರು ಹೊಲ ಗದ್ದೆಗಳಿಗೆ ತೆರಳಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ.
ಶುಕ್ರವಾರ ಸಂಜೆ ಅಡಗಂಟಿ ಗ್ರಾಮದ ಸುದೀಪ್ ಎಂಬ ಯುವಕ ಗದ್ದಗೆ ಮೇವು ತರಲು ಹೋದಾಗ ಹಠಾತ್ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಪ್ರಾಣಾಪಾಯದಿಂದ ಪಾರಾದ ಯುವಕನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಶನಿವಾರ ಬೆಳಿಗ್ಗೆ ಗದ್ದಗೆ ನೀರು ಬಿಡಲು ಹೋದ ತಡಸನಹಳ್ಳಿ ಗ್ರಾಮದ ರೈತ ಮುತ್ತಣ್ಣ ಎಂಬುವವರ ಮೇಲೆ ಚಿರತೆ ಮತ್ತೆ ದಾಳಿ ನಡೆಸಿದೆ, ಇನ್ನೊಬ್ಬ ಬಿದರಕೊಪ್ಪ ಗ್ರಾಮದ ಹೂವ್ಯಾನಾಯ್ಕ ಎಂಬುವವರು ಬೈಕಿನಲ್ಲಿ ಹೋಗುತ್ತಿದ್ದಾಗ ತಡಸನಹಳ್ಳಿ ಅಡಗಂಟಿ ಮದ್ಯ ಸಂಜೆ ಮತ್ತೆ ದಾಳಿ ಮಾಡಿದೆ ಗಾಯಗೊಂಡ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸತತವಾಗಿ ಮನುಷ್ಯರ ಮೇಲೆ ಚಿರತೆ ದಾಳಿ ನಡೆಸುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರಲ್ಲಿ ಅತಂಕ ಹೆಚ್ಚಾಗಿದ್ದು ಹೊಲ ಗದ್ದೆಗೆ ಹೋಗಲು ಹಿಂಜರಿಯುತ್ತಿದ್ದಾರೆ,
ಉಪವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದು ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ,ಬೋನ್ ಇರಿಸಿ ಚಿರತೆ ಚಲನ ವಲನದ ಮೇಲೆ ಕಣ್ಣಿಟ್ಟಿದ್ದಾರೆ.
ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು ಚಿರತೆ ಸೆರೆಗೆ ಆಗ್ರಹಿಸಿದ್ದಾರೆ.ಅಡಗಂಟಿ ಗ್ರಾಮದ ರೈತ ಸಂಜೀವ ಮಾತನಾಡಿ ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಹೊಲ ಗದ್ದೆಗೆ ಹೋಗಲು ರೈತರು ಭಯಪಡುವಂತಾಗಿದೆ. ಈ ಕೂಡಲೇ ಅರಣ್ಯಾಧಿಕಾರಿಗಳು ಚಿರೆತೆ ಸೆರೆ ಹಿಡಿಯಬೇಕು ಎಂದು ಆಗ್ರಹ ವ್ಯಕ್ತ ಪಡಿಸಿದರು.
ವಲಯ ಅರಣ್ಯಾಧಿಕಾರಿ ಜಾವೀದ್ ಮಾತನಾಡಿ ಈಗಾಗಲೇ ಚಿರತೆಯಿರುವಿಕೆ ಜೋಳದಗದ್ದೆಯಲ್ಲಿ ಪತ್ತೆಯಾಗಿದೆ. ಇದರ ಸೆರೆಗೆ ಬೋನ್ ಇರಿಸಿದ್ದೇವೆ. ಕಾಡಂಚಿನ ಹೊಲ ಗದ್ದೆಯ ರೈತರು ರಾತ್ರಿ ವೇಳೆ ಒಬ್ಬರಾಗಿ ಸಂಚರಿಸದಿರುವುದು ಒಳಿತು, ಒಂದು ವೇಳೆ ಚಿರತೆ ಕಂಡು ಬಂದರೆ ಕೂಡಲೆ ಅರಣ್ಯ ಇಲಾಖೆಗೆ ಮಹಿತಿ ನೀಡಿ ಎಂದು ವಿನಂತಿಸಿದರು.
ವರದಿ: ನವೀದ್ ಶಿರಾಳಕೊಪ್ಪ

