ಶಿರಾಳಕೊಪ್ಪ:11/02/2026
ಹತ್ತಿರದ ಭೋಗಿ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಶಾಲಾ ವಾರ್ಷಿಕೋತ್ಸವ ಸೋಮವಾರ ನಡೆಯಿತು.
ಅತೀ ಸಣ್ಣ ಗ್ರಾಮವಾದರೂ ಅಂದು ಅಲ್ಲಿ ಮಾತ್ರ ಹಬ್ಬದ ಸಡಗರ ಸಂಭ್ರಮ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಪುಟ್ಟ ಪುಟಾಣಿಗಳ ಪುಟಿವ ಕಾರಂಜಿ ಕಾರ್ಯಕ್ರಮದ ಆಯೋಜನೆ, ಶಾಲೆ ಮತ್ತು ಶಾಲಾ ಆವರಣದ ಅಲಂಕಾರ, ಬ್ರಹತ್ ಗಾತ್ರದ ವೇದಿಕೆ, ಗ್ರಾಮಸ್ಥರಿಂದ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಗಳಿಗೆ ಮನಸಾರೆ ಸ್ವಾಗತ ಕೋರಿದ ಪರಿ ಬಹಳ ಆಕರ್ಷಿತವಾಗಿತ್ತು. ಇಡೀ ಗ್ರಾಮದ ಪ್ರತಿ ಯೊಬ್ಬರೂ ಕೈ ಜೋಡಿಸಿ ಸಮುದಾಯದ ಸಹ ಭಾಗಿತ್ವಕ್ಕೆ ಮಾದರಿಯಾದರು.

ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಜಮೀರ್ ಅಹ್ಮದ್ ರವರು ಗಿಡಕ್ಕೆ ನೀರು ಹಾಕುವ ಮೂಲಕ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಬಂಗಾರಿ ನಾಯಕರು ಮಾತನಾಡಿ ಶಾಲೆಗಳು ದೇವಸ್ಥಾನ ಇದ್ದ ಹಾಗೆ. ಯಾವ ರೀತಿಯಲ್ಲಿ ಮಂದಿರ ಮಸೀದಿಗಳ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿ ಜೋಪಾನ ಮಾಡುತ್ತಾರೆ ಅದೇ ತರ ಶಾಲೆಗಳ ಬಗ್ಗೆ, ಒಳ್ಳೇ ಮೇಷ್ಟ್ರು ಗಳ ಬಗ್ಗೆ ಭಾವನೆ ಹೊಂದ ಬೇಕೆಂದು ಕರೆ ನೀಡಿದರು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಟಿ ಬಿ ಮಾತನಾಡಿ ಮಕ್ಕಳ ಓದಿನ ಬಗ್ಗೆ ಪೋಷಕರು ವಹಿಸುವ ಆಸಕ್ತಿಯು ಅವರ ಶೈಕ್ಷಣಿಕ ಯಶಸ್ಸಿಗೆ ಭದ್ರ ಬುನಾದಿಯಾಗುತ್ತದೆ. ಪೋಷಕರು ಕೇವಲ ಮಾರ್ಗದರ್ಶಕರಲ್ಲದೆ, ಮಕ್ಕಳ ಕಲಿಕೆಯ ಪ್ರಯಾಣದಲ್ಲಿ ಸಕ್ರಿಯ ಪಾಲುದಾರರಾಗಬೇಕೆಂದರು.
ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಧುಕೇಶವ ಮಾತನಾಡಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಸಂಸ್ಕೃತಿಯ ತಳಹದಿ, ಭೋಗಿ ಗ್ರಾಮದಂತಹ ಸಣ್ಣ ಪ್ರದೇಶದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರು ಒಗ್ಗೂಡಿ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸದರಿ ಶಾಲೆಗೆ ಶ್ರದ್ಧೆ, ನಿಷ್ಠೆ ಮತ್ತು ಸಮರ್ಪಣೆಯಿಂದ ಕೆಲಸ ಮಾಡುವ ಶಿಕ್ಷಕರು ಸಿಕ್ಕಿದ್ದಾರೆ ಗ್ರಾಮಸ್ಥರು, ಪೋಷಕರು ಅವರಿಗೆ ಬೆಂಬಲವಾಗಿ ಇದ್ದು ಶಾಲೆ ಮತ್ತು ಮಕ್ಕಳ ಭವಿಷ್ಯ ರೋಪಿಸಿಕೊಳ್ಳ ಬೇಕೆಂದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿಕ್ಷಕ ಜಮಾಲುದ್ದಿನ್ ನಿರೂಪಣೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರೆ ಶಾಲೆಯ ಮುಖ್ಯ ಶಿಕ್ಷಕ ಜಾಬೀರ್ ಬಾಷ ರವರ ಸಾರಥ್ಯ ದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಉತ್ಸಾಹ ಮತ್ತು ಲವಲವಿಕೆಯಿಂದ ಭಾಗವಹಿಸಿ ಹಬ್ಬದ ರೀತಿಯಲ್ಲಿ ವಾರ್ಷಿಕೋತ್ಸವ ಆಚರಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕರಾದ ಯೋಗೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವಿನಾಯಕ್, ಶಿಕ್ಷಣ ಇಲಾಖೆಯ ರಫೀಕ್ ಅಹ್ಮದ್, ನಾಸಿರ್ ಅಹ್ಮದ್, ಆಸೀಫ್, ಅಶ್ಫಾಕ್ ಅಹ್ಮದ್, ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ತೌಸೀರ್ ಅಹ್ಮದ್, ಗ್ರಾಮದ ಪ್ರಮುಖರಾದ ನ್ಯಾಯವಾದಿ ತನ್ವೀರ್ ಅಹ್ಮದ್, ನೋರ್ ಅಹ್ಮದ್ ಸಾಬ್, ಅಬ್ದುಲ್ ಜಾಫರ್, ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಮಕ್ಕಳ ಪೋಷಕರು, ಶಾಲೆಯ ಹಳೆ ವಿದ್ಯಾರ್ಥಿ ಗಳು ಹಾಗೂ ಬ್ರಹತ್ ಸಂಖ್ಯೆಯಲ್ಲಿ ಗ್ರಾಮನಿವಾಸಿಗಳು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ 9538633929

