ಶಿರಾಳಕೊಪ್ಪ :12-09-2025
ಹತ್ತಿರದ ಕಡೆನಂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಧಿಡೀರ್ ವರ್ಗಾವಣೆಯನ್ನು ಖಂಡಿಸಿ ಮಕ್ಕಳು ಹಾಗೂ ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಶಾಲೆಗೆ ಒಟ್ಟು ಏಳು ಶಿಕ್ಷಕರ ಹುದ್ದೆ ಇದ್ದು, ಇಬ್ಬರು ಈಗಾಗಲೇ ಬೇರೆಡೆ ನಿಯೋಜನೆಯಲ್ಲಿದ್ದಾರೆ. ಇನ್ನು ಮೂವರು ಶಿಕ್ಷಕರನ್ನು ದಿಡೀರ್ ವರ್ಗಾವಣೆ ಮಾಡಲಾಗಿದ್ದು, ಕೇವಲ ಇಬ್ಬರು ಶಿಕ್ಷಕರು ಶಾಲೆ ನಡೆಸುವಂತಾಗಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಗಂಭೀರವಾಗಿ ಹಾನಿಗೊಳಗಾಗಿದೆ.

ಪೋಷಕರು ಪ್ರಾಥಮಿಕ ಹಂತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಕೂಡಲೇ ಶಿಕ್ಷಕರ ಕೊರತೆಯನ್ನು ನಿವಾರಿಸದಿದ್ದರೆ ಶಾಲೆಗೆ ಬೀಗ ಹಾಕಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಎಸ್ಡಿಎಂಸಿ ಸದಸ್ಯೆ ಅಶ್ವಿನಿ ಮಾತನಾಡಿ, “ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆ ಆಗದಂತೆ ಕೂಡಲೇ ಶಿಕ್ಷಕರನ್ನು ನಿಯೋಜಿಸಬೇಕು” ಎಂದು ಆಗ್ರಹಿಸಿದರು.ಮತ್ತೋರ್ವ ಸದಸ್ಯ ಕುಮಾರ್ ಮಟ್ಟಿಮನಿ ಮಾತನಾಡಿ, “ವರ್ಗಾವಣೆ ಆದ ಶಿಕ್ಷಕರ ಬದಲು ತಕ್ಷಣವೇ ಹೊಸ ಶಿಕ್ಷಕರನ್ನು ನಿಯೋಜಿಸಬೇಕು. ಇಲ್ಲದಿದ್ದರೆ ಮಕ್ಕಳು ಖಾಸಗಿ ಶಾಲೆಗಳಿಗೆ ವಲಸ ಹೋಗುವ ಸಾಧ್ಯತೆ ಇದೆ. ಸರ್ಕಾರದ ಶಾಲೆಯನ್ನು ಉಳಿಸಿಕೊಳ್ಳಲು ಶಿಕ್ಷಕರ ಕೊರತೆ ತಕ್ಷಣ ನಿವಾರಿಸಬೇಕು” ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಾಜ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರೆಡ್ಡೆಪ್ಪ ರೆಡ್ಡಿ, ಸದಸ್ಯರಾದ ಸಿದ್ದಯ್ಯ ಸ್ವಾಮಿ, ಬಸವರಾಜಪ್ಪ ಮೇಲಿನ ಮನೆ, ಮಲ್ಲಮ್ಮ, ಸುಜಾತಾ ಹಾಗೂ ನೇತ್ರ ಸೇರಿದಂತೆ ಪ್ರಮುಖರು ಇದ್ದರು.

