ಶಿರಾಳಕೊಪ್ಪ:10/1/2026
ಯುವಕರು ಕ್ರೀಡೆಯನ್ನು ಕೇವಲ ಮನರಂಜನೆಯಾಗಿ ನೋಡದೇ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಅವಶ್ಯಕವಾದ ಶಿಸ್ತಿನ ಸಾಧನವಾಗಿ ಬಳಸಿಕೊಳ್ಳಬೇಕು. ಆರೋಗ್ಯವಂತ ಯುವಕರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪುರಸಭೆಯ ಮಾಜಿ ಸದಸ್ಯ ತಡಗಣಿ ಮಂಜುನಾಥ್ ಹೇಳಿದರು.
ತಡಗಣಿ ಗ್ರಾಮದಲ್ಲಿ ಆಯೋಜಿಸಿದ್ದ ತಡಗಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಯುವಕರಲ್ಲಿ ಆತ್ಮವಿಶ್ವಾಸ, ತಂಡಭಾವನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಆದರೆ ಆಟದ ಜೊತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ದೈಹಿಕ ಸ್ಥಿತಿಯಲ್ಲಿದ್ದಾಗ ಮಾತ್ರ ಪ್ರತಿಭೆ ಬೆಳಕಿಗೆ ಬರುತ್ತದೆ. ಯುವಕರು ಕೇವಲ ಆಟದಲ್ಲಿ ತೊಡಗಿಸಿಕೊಳ್ಳದೇ ತಮ್ಮ ಭವಿಷ್ಯದ ಆರ್ಥಿಕ ಭದ್ರತೆಯ ಬಗ್ಗೆ ಕೊಡ ಗಂಭೀರವಾಗಿ ಚಿಂತಿಸಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಶಿಕಾರಿಪುರದಲ್ಲಿ ಉದ್ಯೋಗ ಮೇಳ ನಡೆಯುತ್ತಿದೆ. ಇದರ ಅಂಗವಾಗಿ ಶಿರಾಳಕೊಪ್ಪದಲ್ಲಿ ಜನವರಿ 17 ಮತ್ತು ಫೆಬ್ರವರಿ 7ಕ್ಕೆ ಪೂರ್ವಭಾವಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಸಕ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ನಾಮಿನಿ ಸದಸ್ಯ ತೇಜಪ್ಪ, ಯುವಕರು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಗ್ರಾಮೀಣ ಸಂಸ್ಕೃತಿ ಉಳಿಯುವುದರ ಜೊತೆಗೆ ಸಾಮಾಜಿಕ ಒಗ್ಗಟ್ಟೂ ಬಲಪಡುತ್ತದೆ ಎಂದರು.
ಶಿಕಾರಿಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಕ್ರೀಡಾ ಅವಕಾಶಗಳು

ಹೆಚ್ಚಾಗಬೇಕಿದೆ. ಆದರೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಸೂಕ್ತ ಮೈದಾನದ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಮೈದಾನವನ್ನು ಸರಿಪಡಿಸಲು ಆಯೋಜಕರು ಹೆಚ್ಚಿನ ಹಣ ವ್ಯಯಿಸುವ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ಯುವಕರು ಮೈದಾನದಲ್ಲಿ ಮಾತ್ರ ಕ್ರಿಕೆಟ್ ಆಡಿ ಸಂಭ್ರಮಿಸಬೇಕು ಹೊರತು ಮೊಬೈಲ್ ಆಪ್ಗಳಲ್ಲಿ ನಡೆಯುವ ಕ್ರಿಕೆಟ್ ಬೆಟ್ಟಿಂಗ್ ಆಮಿಷಗಳಿಗೆ ಬಲಿಯಾಗದೆ ತಮ್ಮ ಜೀವನವನ್ನು ಭದ್ರಪಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಮಿತ್ರೇಶ್ ಮಾತನಾಡಿ, ಈ ಟೂರ್ನಿಯಲ್ಲಿ ಗ್ರಾಮದ ಆರಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿರುವುದು ವಿಶೇಷ. ಆಟಗಾರರಿಗೆ ಗ್ರಾಮಸ್ಥರು ಶಕ್ತಿ ಮತ್ತು ಪ್ರೋತ್ಸಾಹ ನೀಡಬೇಕು ಎಂದರು.

ತಡಗಣಿ ಪ್ರೀಮಿಯರ್ ಲೀ ಕ್ರಿಕೆಟ್ ಪಂದ್ಯಾವಳಿ ಆಯೋಜಕರು ನೂತನ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ನವೀನ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಹಿರೇಕಸವಿ ಸೈಯದ್, ಪಂದ್ಯಾವಳಿಯ ಆಯೋಜಕರಾದ ವಿಕಾಸ್, ಶಿವರಾಜ್, ಅಸ್ಲಾಂ, ಕಲಾವಿದ ಶಿವಾನಂದ,ಸುಹಾಸ್, ಅನಿಲ್ ಉಪಸ್ಥಿತರಿದ್ದರು. ಯಶವಂತ್ ಕಾರ್ಯಕ್ರಮ ನಿರೂಪಿಸಿದರು.
ವರದಿ:ನವೀದ್ ಶಿರಾಳಕೊಪ್ಪ 9538633929

