ಶಿರಾಳಕೊಪ್ಪ:22/03/2025
ರಾಜ್ಯದಾದ್ಯಂತ ಬೀದರ್ ನಿಂದ ಮೈಸೂರು ವರೆಗೂ ಸೌಹಾರ್ದ ಇಫ್ತಾರ್ ಕೂಟ ನಡೆಸುವ ಮೂಲಕ ಮಾನವ ಸಂಭಂದ ಗಳನ್ನು ಬೆಸುಗೆ ಹಾಕುವ ಕೆಲಸ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕ ಮಾಡುತ್ತಿದೆ ಎಂದು ರಾಜ್ಯ ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಜನಾಬ್ ರಿಯಾಜ್ ಅಹ್ಮದ್ ರೋಣ ಹೇಳಿದರು.

ಪಟ್ಟಣದ ಹಜರತ್ ಉಮರ್ ಫಾರೂಖ್ ಮಸೀದಿಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಗುರುವಾರ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು
ನಾವು ಉಪಕಾರ ಮನೋಭಾವನೆಯನ್ನು ಹೊಂದುವ ಜೊತೆಗೆ ಬೇರೆಯವರು ನೀಡಿದ ತೊಂದರೆಗಳನ್ನು ಮರೆತು ಬಿಡುವ ಹವ್ಯಾಸ ಹೊಂದಬೇಕು . ದೇವರನ್ನು , ಮರಣವನ್ನು ಸದಾ ನೆನಪಿನಲ್ಲಿಡಬೇಕು.

ಉಪವಾಸದಿಂದ ಇನ್ನೊಬ್ಬರ ಹಸಿವು ಏನೆಂಬುದು ಅರಿವಾಗುತ್ತದೆ. ಸಮಾಜದಲ್ಲಿ ಬಡವರು ನಿರ್ಗತಿಕರು, ಅನಾಥರು ಇದ್ದಾರೆ ಇವರ ಹಸಿವು ನೀಗಿಸುವ ಕೆಲಸ ನಮ್ಮಿಂದಾಗಬೇಕು. ನಿಸ್ವಾರ್ಥ ದಾನ ಧರ್ಮ ಉತ್ತಮ ಮನುಷ್ಯನ ಲಕ್ಷಣ.
ಎಲ್ಲಾ ಸಮುದಾಯದವರು ಒಬ್ಬರಿಗೊಬ್ಬರು ತಮ್ಮ ತಮ್ಮ ಧರ್ಮಗಳ ಬಗ್ಗೆ, ಧಾರ್ಮಿಕ ವಿಚಾರಗಳ ಆಚರಣೆಗಳ ಮತ್ತು ಪದ್ಧತಿಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರೆ ಸಮಾಜದಲ್ಲಿ ಸಾಮರಸ್ಯ ಕಾಣಲು ಸಹಕಾರಿಯಾಗುತ್ತದೆ ಎಂದರು.
ಉಪನ್ಯಾಸಕ ವಿಜಯ್ ಕುಮಾರ್ ಎಂ. ಸಿ ಮಾತನಾಡಿ, ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ಒಂದು ತಿಂಗಳು ಒಳ್ಳೆಯ ಕಾರ್ಯ ಗಳು ಮಾಡಿದರೆ ವರ್ಷವಿಡಿ ಒಳ್ಳೆಯದನ್ನೇ ಮಾಡಲು ಪ್ರೇರಣೆ ಸಿಗುತ್ತದೆ. ಇದರಿಂದ ಶಾಂತಿಪ್ರಿಯರಾಗಲು ಸಾಧ್ಯ, ನಮ್ಮ ದೇಶದಲ್ಲಿರುವ ವೈವಿಧ್ಯತೆ ಬೇರೆಡೆ ಎಲ್ಲೂ ಕಾಣಲು ಸಾಧ್ಯವಿಲ್ಲ, ಜವಾಬ್ದಾರಿ ಮರೆತಾಗ ಅಶಾಂತಿ ಮೂಡುತ್ತದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆಯಲ್ಲಿ ಬದುಕಿದಾಗ ಎಲ್ಲ ಧರ್ಮದ ಆಶಯಗಳು ಫಲಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಮಾತ್ ಇಸ್ಲಾಮಿ ಶಿರಾಳಕೊಪ್ಪ ಘಟಕದ ವರಿಷ್ಠರಾದ ಜನಾಬ್ ಚಮನ್ ಮಿಯಾಸಾಬ್, ಶಾಖಾ ಅಧ್ಯಕ್ಷ ಜನಾಬ್ ಮೊಹಮ್ಮದ್ ಹುಸೇನ್, ಎಸ್ ಐ ಓ ಅಧ್ಯಕ್ಷ ಲುಕ್ಮಾನ್ ಮತ್ತು ಸಂಘಟನೆಯ ಸದಸ್ಯರು ಕಾರ್ಯಕರ್ತರು ಇದ್ದರು .
ಸರ್ವ ಧರ್ಮದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸೌಹಾರ್ದ ಇಫ್ತಾರ್ ಕೂಟದ ಫಲಹಾರ ಸವಿದರು.
ವರದಿ: ನವೀದ್ ಶಿರಾಳಕೊಪ್ಪ