ರಾಜ್ಯಕ್ಕೆ ಬೆಳಕು ನೀಡಿದವರ ಬದುಕು
“ರಾಜ್ಯಕ್ಕೆ ಬೆಳಕು ನೀಡಿದವರ ಬದುಕು ಹಸನಾಗಿಸುವ ಸಂಕಲ್ಪ ನನ್ನದಾಗಿದೆ”
ಶರಾವತಿ ಮುಳುಗಡೆ ಪ್ರದೇಶದ ನಿರಾಶ್ರಿತ ಸಂತ್ರಸ್ತ ಕುಟುಂಬಗಳು ಒಗ್ಗೂಡಿ ಸಂಯುಕ್ತ ವೇದಿಕೆ ಮೂಲಕ ಸಾಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿ ಅವರ ಸಮಗ್ರ ಬೇಡಿಕೆಗಳನ್ನು ಸ್ವೀಕರಿಸಲಾಯಿತು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಕೇಂದ್ರದಲ್ಲಿ ಪ್ರಸ್ತುತ ಮತ್ತು ಹಿಂದಿನ ಅವಧಿಯ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಅವರ ಬೇಡಿಕೆಗಳಿಗೆ ಅನುಗುಣವಾಗಿ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಾಮಾಣಿಕ ಪ್ರಯತ್ನದ ಕುರಿತು ವೇದಿಕೆಯ ಹೋರಾಟಗಾರರಿಗೆ ಮನವರಿಕೆ ಮಾಡಿಕೊಡಲಾಯಿತು.




ನಿಮ್ಮೆಲ್ಲರ ಸತತ ನಾಲ್ಕನೇ ಬಾರಿಯ ನಿರಂತರ ಆಶೀರ್ವಾದದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಳಿಕ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಸೂಕ್ತ ನ್ಯಾಯ ಕೊಡಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೇರಿದಂತೆ ಮುಳುಗಡೆ ಪ್ರದೇಶಕ್ಕೆ ಸಂಬಂಧ ಪಟ್ಟ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಕೈಗೊಂಡಿರುವ ದಿಟ್ಟ ಕ್ರಮಗಳ ಕುರಿತು ಸಭೆಯ ಗಮನ ಸೆಳೆಯಲಾಯಿತು.
ನಿಮ್ಮೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸದಾ ಕಾಲ ಜೊತೆಯಾಗಿ ನಿಲ್ಲುತ್ತದೆ. ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರ ಹಿತ ಕಾಪಾಡಲು ಬದ್ಧವಾಗಿದೆ. ನಿಮ್ಮ ಭರವಸೆ ಉಳಿಸಿಕೊಳ್ಳಲು ಶ್ರಮಿಸುವ ವಾಗ್ದಾನ ಮಾಡುತ್ತೇನೆ. ನಿಮ್ಮ ನೋವಿನಲ್ಲಿ ನಾನು ಕೂಡ ಪಾಲುದಾರನಾಗಿದ್ದು, ಕೇಂದ್ರದ ಹಂತದಲ್ಲಿ ತುರ್ತಾಗಿ ಆಗಬೇಕಿರುವ ಪ್ರಮುಖ ಕಾರ್ಯಗಳ ಬಗ್ಗೆ ಗಮನ ಸೆಳೆಯುತ್ತೇನೆ ಎಂಬ ಸಂಕಲ್ಪ ತೊಡುತ್ತೇನೆ ಎಂಬ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಹರತಾಳು ಹಾಲಪ್ಪ ಅವರು, ಪ್ರಮುಖರಾದ ಶ್ರೀ ಗಣೇಶ್ ಪ್ರಸಾದ್ ಅವರು, ಶ್ರೀ ಹಕ್ಕರೆ ಮಲ್ಲಿಕಾರ್ಜುನ್ ಅವರು, ಶ್ರೀಮತಿ ರಾಜನಂದಿನಿ ಅವರು ಸೇರಿದಂತೆ ಅನೇಕ ಮುಖಂಡರು ಜೊತೆಗಿದ್ದರು.

