ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಉದ್ಘಾಟಿಸಿದರು.

The Siasat News - Images

ಶಿಕಾರಿಪುರ/ಶಿರಾಳಕೊಪ್ಪ:16-11-2024

ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಹೇಳಿದರು.

ತಾಲೂಕಿನ ಶಿರಾಳಕೊಪ್ಪ ಸಮೀಪದ ಭದ್ರಾಪುರದ ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

The Siasat News - Images

ನುಡಿದಿದ್ದನ್ನು ಬರೆಯುವ ಮತ್ತು ಬರೆದಂತೆ ನುಡಿಯುವ ಭಾಷೆ ಕನ್ನಡ ಮಾತ್ರ. ಅಂತಹ ಅಗಾಧವಾದ ಶಕ್ತಿ ಕನ್ನಡಕ್ಕಿದೆ. ಜೊತೆಗೆ ನುಡಿಗಳಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಯೂ ಇದೆ. ಈ ನಿಟ್ಟಿನಲ್ಲಿಯೇ ಕನ್ನಡಕ್ಕೆ ವಿಶ್ವ ಲಿಪಿಗಳ ರಾಣಿ ಎಂದು ಕರೆಯಲಾಗುತ್ತದೆ. ಅತಿ ಹೆಚ್ಚು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಲಭಿಸಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ವಿಚಾರದಲ್ಲಿ ವಿಶ್ವದರ್ಜೆಯ ಸ್ಥಾನ ಪಡೆದ ಕನ್ನಡ ಅತ್ಯಂತ ಶ್ರೇಷ್ಠ, ಸುಂದರ, ಸರಳ, ಸುಲಲಿತ ಭಾಷೆಯಾಗಿದೆ ಎಂದರು.

ನವೆಂಬರ್ ತಿಂಗಳಿನಲ್ಲಿ ಮಾತ್ರವೇ ಭಾಷಾಭಿಮಾನ ತೋರಿದರೆ ಸಾಲದು, ಕನ್ನಡ ನಿತ್ಯೋತ್ಸವವಾಗಬೇಕು. ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸುವ ಮನೋಭಾವ ಹೊಂದಬೇಕು. ವ್ಯವಹಾರಿಕ ಭಾಷೆಯಾಗಿ ಕನ್ನಡ ಬೆಳೆಯಬೇಕು. ಉದ್ಯೋಗದಲ್ಲಿಯೂ ಸಹ ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಆಡಳಿತದಲ್ಲಿ ಕನ್ನಡ ಪ್ರಥಮ ಹಾಗೂ ಪ್ರಧಾನ ಭಾಷೆಯಾದಾಗ ಮಾತ್ರ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಕನ್ನಡ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ನವಾಬ್ ಗುತ್ತೇದಾರ್ ಮಾತನಾಡಿ, ರಾಜ್ಯೋತ್ಸವ ಎಂಬುದು ಆಚರಣೆಯಾಗಿದೆ ಹಬ್ಬವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು. ಭಾಷೆ ಮತ್ತು ಕರುನಾಡಿಗಾಗಿ ಶ್ರಮಿಸಿದವರ ಬಗ್ಗೆಯೂ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕರುನಾಡಿನ ಇತಿಹಾಸ ಕುರಿತು ಮನದಟ್ಟು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಅವರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಉಪಪ್ರಾಂಶುಪಾಲ ಜಾಫರ್ ಇಕ್ಬಾಲ್, ಸಂಯೋಜಕಿ ಹರ್ಷದಾ, ಶಿಕ್ಷಕರಾದ ಎಸ್. ಪ್ರಶಾಂತ್, ಕೊಂಡಮ್ಮ, ಜಿ.ಎನ್. ಪುನೀತ್, ಜೈ ಕುಮಾರ್, ಮೇಘನಾ, ಧನಶ್ರೀ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *